ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Saturday, August 18, 2007

ಗಾಂಧೀಜಿಗೆ "ಮಹಾತ್ಮ" ಅಭಿದಾನ ದೊರೆತದ್ದು ಹೇಗೆ...

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅವರಿಗೆ 60 ವರ್ಷ. ಸ್ವಾತಂತ್ರ್ಯ ಸಿಕ್ಕಮೇಲೂ 60 ವರ್ಷದ ಬಳಿಕ ಹಳೆಯ ದಿನಗಳ ಮೆಲುಕು ಹಿಂದಿನ ದಿನಗಳನ್ನು ಕೆದಕಿದರೆ ಅವರ ಮುಖದಲ್ಲಿ ಸಂತಸದ ಕೋಲ್ಮಿಂಚು ಹರಿಯುತ್ತದೆ. ಬಹುಶಃ ಅನೇಕರಿಗೆ ಗೊತ್ತಿಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಒಡನಾಡಿ, ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ವೀರ ಮರಣವನ್ನಪ್ಪಿದ ಭಗತ್ ಸಿಂಗ್, ರಾಜಗುರು ಮೊದಲಾದವರ ಗುರುಗಳಾಗಿದ್ದವರು ಪಂಡಿತ ಸುಧಾಕರ ಚತುರ್ವೇದಿ. ನಾಲ್ಕೂ ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದಗಳನ್ನು ಸಲೀಸಾಗಿ ಓದಿಕೊಂಡವರು. ಜಲಿಯನ್ ವಾಲಾ ಬಾಗ್ ನರಮೇಧದ ಪ್ರತ್ಯಕ್ಷದರ್ಶಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ. ಅವರಿಗೀಗ ವಯಸ್ಸು 120. ಹುಟ್ಟಿದ್ದು 1887ರಲ್ಲಿ. ಕನ್ನಡದಲ್ಲಿ ವೇದಕ್ಕೆ ಸಂಬಂಧಿಸಿ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಸಂಸ್ಕೃತ ಹಾಗೂ ಆಂಗ್ಲಭಾಷೆಯಲ್ಲೂ ಸುಮಾರು 20ಕ್ಕೂ ಹೆಚ್ಚು ಕೃತಿಗಳು ರಚನೆಗೊಂಡಿವೆ. ಅವರು ಅಪ್ಪಟ ಕನ್ನಡಿಗ. ಪ್ರಸ್ತುತ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿರುವ ಅವರು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ವೆಬ್‌ದುನಿಯಾ ಕನ್ನಡಕ್ಕಾಗಿ ವಿಶೇಷ ಸಂದರ್ಶನ ನೀಡಿದ್ದಾರೆ.

ಗಾಂಧೀಜಿಯವರೊಂದಿಗಿನ ನಿಮ್ಮ ಸಂಬಂಧ ನೆನಪಿಸಿಕೊಳ್ಳಿ ?

ಗಾಂಧೀಜಿಯವರಿಗೂ ನನಗೂ ಆತ್ಮೀಯ ಸ್ನೇಹ. ಅವರನ್ನು ನಾನು ಸಂಪೂರ್ಣ ಅರ್ಥ ಮಾಡಿಕೊಂಡಿದ್ದೆ. ನನಗೆ ಎಲ್ಲಾ ಭಾಷೆಗಳ ಮೇಲೆ ಪ್ರಭುತ್ವವಿತ್ತು. ದೇಶದ ಉದ್ದಗಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೆ. ನಾನು ಜೈಲಿನಲ್ಲಿದ್ದ ಸಮಯದಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಅವರು ಜೈಲಿನಲ್ಲಿದ್ದ ಸಮಯದಲ್ಲಿ ನಾನು ಬಹುತೇಕ ಹೊರಗಡೆ ಇದ್ದೇ ಕಾರ್ಯಾಚರಿಸುತ್ತಿದ್ದೆ.

ಮಹಾತ್ಮಾ ಮುನ್ಷಿರಾಮ್ ನನ್ನ ಗುರುಗಳು. ಆ ದಿನಗಳಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಆಗತಾನೇ ದೇಶಕ್ಕೆ ಆಗಮಿಸಿದ್ದರು. ಅದು 1915 ಏಪ್ರಿಲ್ 3. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಗಾಂಧೀಜಿಯವರ ಕಳಕಳಿಯನ್ನು ಗಮನಿಸಿದ ಮುನ್ಷಿ ಅವರಿಗೆ ಬಿರುದುಕೊಡಬೇಕು. ಏನನ್ನು ಕೊಡೋಣ ಎಂದು ಕೇಳಿದರು. ನಾನೇ ಮುನ್ಷಿಯವರಿಗೆ ನಿಮ್ಮ ಹೆಸರಿನ ಹಿಂದೆ "ಮಹಾತ್ಮಾ" ಇದೆಯಲ್ಲಾ, ಅದನ್ನೇ ಅವರಿಗೆ ಕೊಟ್ಟು ಬಿಡಿ ಎಂದಿದ್ದೆ. ಹಾಗೆ ಅಲ್ಲಿಯವರೆಗೆ ಎಂ.ಕೆ. ಗಾಂಧಿ ಎಂದು ಸಹಿ ಮಾಡುತ್ತಿದ್ದ ಗಾಂಧೀಜಿ, "ಮಹಾತ್ಮಾ ಗಾಂಧಿ"ಯಾದರು. ಗಾಂಧೀಜಿ ಮಹಾತ್ಮಾ ಆಗೋದರಲ್ಲಿ ನನ್ನ ಪಾತ್ರವೂ ಇದೆ ಎಂಬುದು ನನಗೆ ತುಂಬಾನೇ ಖುಷಿ ಕೊಟ್ಟ ವಿಷಯ.

ಸ್ವಾತಂತ್ರ್ಯ ಹೋರಾಟದ ಆ ದಿನಗಳ ಬಗ್ಗೆ ಒಂದಿಷ್ಟು ಹೇಳಿ...

ಸ್ವಾತಂತ್ರ್ಯ ಹೋರಾಟಕ್ಕೆ ನಮಗೆ ಇಂಥದ್ದೇ ಪ್ರದೇಶ ಎಂಬುದಿರಲಿಲ್ಲ. ಕರಾಚಿಯಿಂದ ಕೊಯಮತ್ತೂರುವರೆಗೆ ನಮ್ಮ ಕಾರ್ಯಕ್ಷೇತ್ರ. ಗಾಂಧಿಯವರೊಂದಿಗೆ ಸಾವಿರಾರು ಮೈಲಿ ಸುತ್ತಿದ್ದೇನೆ. ಕರಾಚಿ, ವೆಲ್ಲೂರು, ಕೊಯಮತ್ತೂರು ಜೈಲುಗಳಲ್ಲಿಯೂ ಕಾಲ ಕಳೆದಿದ್ದೇನೆ. ಬದುಕಿನ ಹದಿನೈದು-ಇಪ್ಪತ್ತು ವರ್ಷಗಳ ಕಾಲ ಜೈಲಿನಲ್ಲೇ ಕಳೆದಿದ್ದೆ. ಆದರೆ ಅಲ್ಲಿರುವಾಗಲೇ ನನಗೆ ಅನೇಕ ಕೃತಿಗಳ ರಚನೆ ಮಾಡಲು ಸಾಧ್ಯವಾಯಿತು. "ವೇದ ಪ್ರಕಾಶ ಪ್ರದೀಪ"ವನ್ನು ಆ ದಿನಗಳಲ್ಲೇ ಬರೆದೆ.

ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.

ನಟಿ ಅಮೂಲ್ಯ ಸ್ವಾತಂತ್ರ್ಯೋತ್ಸವ ಶುಭಾಶಯ ಕೋರುತ್ತಿದ್ದಾರೆ...

ಸದ್ಯ ಗಾಂಧಿ ನಗರದ ಎಲ್ಲೆಡೆ ಮನೆಮಾತಾಗಿರುವ ಹುಡುಗಿ ಅಮೂಲ್ಯ. ಇನ್ನೂ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವಾಕೆ. ಈಗಾಗಲೇ ಯಶಸ್ವೀ ನಾಯಕ ನಟ, "ಮುಂಗಾರು ಮಳೆ"ಯ ಹೀರೋ ಗಣೇಶ್‌ಗೆ ನಾಯಕಿಯಾಗಿ ಕರ್ನಾಟಕದಲ್ಲಿ ಮನೆಮಾತಾಗಿದ್ದಾಳೆ. ತನ್ನ ನೈಜ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಎಸ್. ನಾರಾಯಣ್ ನಿರ್ದೇಶನದ ಚೆಲುವಿನ ಚಿತ್ತಾರಕ್ಕೆ ಈಕೆ ನಾಯಕಿ. ಚಿತ್ರ ಬಿಡುಗಡೆಯಾಗಿ 50 ದಿನ ಕಳೆದಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆ. ಅರೆ, ಇಷ್ಟು ಸಣ್ಣ ವಯಸ್ಸಿಗೇ ಅದೇನು ಮೋಡಿ ಮಾಡಿದ್ದಾಳಲ್ಲಾ ಎಂದು ಹುಬ್ಬು ಹಾರಿಸಬೇಕಿಲ್ಲ.

ಈಕೆ ಬಾಲನಟಿಯಾಗಿ ತನ್ನ 7ನೇ ವರ್ಷದಲ್ಲಿ ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪ್ರವೇಶಿಸಿದವಳು. ಡಾ.ಗಿರಿಜಮ್ಮ ಅವರ ಧಾರಾವಾಹಿ "ಸುಪ್ತಮನಸ್ಸಿನ ಸಪ್ತಸ್ವರಗಳು", ಸುನೀಲ್ ಕುಮಾರ್ ದೇಸಾಯಿಯವರ ಚಿತ್ರ "ಪರ್ವ"ದಲ್ಲಿ ಸಣ್ಣದೊಂದು ಪಾತ್ರ, ನಾಗಾಭರಣ ಅವರ "ಗೆಳತಿ" ಧಾರಾವಾಹಿ, ವೈಶಾಲಿ ಕಾಸರವಳ್ಳಿಯವರ "ಮೂಕರಾಗ", ಗಿರೀಶ್ ಕಾಸರವಳ್ಳಿ ನಿರ್ದೇಶನದ "ಗೃಹಭಂಗ", ಯೋಗರಾಜ ಭಟ್ಟರ "ಎಲ್ಲೋ ಜೋಗಪ್ಪ ನಿನ್ನ ಅರಮನೆ", ಹೀಗೆ ವಿವಿಧ ಧಾರಾವಾಹಿಗಳಲ್ಲಿ ತನ್ನ ನೈಜ ಅಭಿನಯದಿಂದಾಗಿ ಎಸ್.ನಾರಾಯಣ್ ಗಮನ ಸೆಳೆದಳು. ಪರಿಣಾಮ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗುವ ಅವಕಾಶ.

ಇಂದು ನಟಿ ಅಮೂಲ್ಯ ಅತ್ಯಂತ ಬ್ಯುಸಿ. ಬೆಳಗ್ಗೆ ಎಂಟು ಗಂಟೆಯಿಂದ ಶಾಲೆ. ಅದಾದ ಬಳಿಕ ಶೂಟಿಂಗ್, ಜತೆಗೆ ಅಭಿಮಾನಿಗಳ ದೂರವಾಣಿ ಹಾರೈಕೆ. ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮದವರ ಸಂದರ್ಶನ ಹೀಗೆ. ಶಾಲೆಗೆ ಹೊರಡುವ ತರಾತುರಿಯಲ್ಲಿ ವೆಬ್ ದುನಿಯಾದೊಂದಿಗೆ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ:

ಚಿಕ್ಕ ವಯಸ್ಸಿನಲ್ಲೇ ನಟಿಯಾಗಿ ನಾಯಕಿಯಾಗಿರುವ ಬಗ್ಗೆ ಏನನಿಸುತ್ತದೆ ?

ತುಂಬಾನೇ ಖುಷಿಯಾಗುತ್ತಿದೆ. ನಟಿಯಾಗಿ ನಟಿಸಿದ ಮೊದಲ ಚಿತ್ರವೇ ಯಶಸ್ವಿಯಾಗಿದೆ. ಇದಕ್ಕೆ ಪ್ರೋತ್ಸಾಹಿಸಿದ ನಿರ್ದೇಶಕ ನಾರಾಯಣ್ ಹಾಗೂ ನನ್ನನ್ನು ಪ್ರೋತ್ಸಾಹಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಈ ವೆಬ್ ದುನಿಯಾ ಕನ್ನಡ ಕಥೆಯ ಸಂಪೂರ್ಣ ಆವೃತ್ತಿಯನ್ನು ಓದಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger